ಚಿತ್ರದುರ್ಗ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬೆಂಗಳೂರು ಹಾಗೂ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಸಾಹಿತ್ಯ ಮತ್ತು ಜಾನಪದ ಕ್ಷೇತ್ರದ ಗಣ್ಯ ಸಾಧಕರಿಗೆ ಪ್ರತಿಷ್ಠಿತ ‘ಗೊರುಚ ದತ್ತಿ ನಿಧಿ ಪ್ರಶಸ್ತಿ’ಗಳನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹಾಗೂ ಮುರುಘಾಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು, “ವಚನ ಸಾಹಿತ್ಯ ಮತ್ತು ಜಾನಪದ ಪರಂಪರೆ ಸಮಾಜವನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ಶಕ್ತಿ ಹೊಂದಿವೆ. ಶರಣರ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಇಂತಹ ದತ್ತಿ ಕಾರ್ಯಕ್ರಮಗಳು ಮತ್ತು ಸಾಧಕರ ಗೌರವ ಸಮಾಜಕ್ಕೆ ಪ್ರೇರಣೆ,” ಎಂದು ಆಶೀರ್ವಚನ ನೀಡಿದರು.
ದತ್ತಿ ದಾಸೋಹಿ, ಹಿರಿಯ ವಿದ್ವಾಂಸ ನಾಡೋಜ ಶ್ರೀ ಗೊ.ರು. ಚನ್ನಬಸಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಸಿ. ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು.
ನಾಲ್ವರು ಸಾಧಕರಿಗೆ ‘ಗೊರುಚ ಪ್ರಶಸ್ತಿ’ ಗರಿ:
-
ಗೊರುಚ ಶರಣ ದತ್ತಿ ಪ್ರಶಸ್ತಿ: ಹಿರಿಯ ಲೇಖಕಿ ಹಾಗೂ ಕವಯಿತ್ರಿ ಡಾ. ಜಯಾ ರಾಜಶೇಖರ್
-
ಗೊರುಚ ಜಾನಪದ ದತ್ತಿ ಪ್ರಶಸ್ತಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಡಾ. ಅಂಬಳಿಕೆ ಹಿರಿಯಣ್ಣ (ಶಿವಮೊಗ್ಗ)
-
ಗೊರುಚ ಶರಣ ಸಾಹಿತ್ಯ ಗ್ರಂಥ ಪ್ರಶಸ್ತಿ: ರಂಗಭೂಮಿ ನಟ, ನಿರ್ದೇಶಕ ಹಾಗೂ ಕೆಎಎಸ್ ಅಧಿಕಾರಿ ಡಾ. ಸಂಗಮೇಶ್ ಉಪಾಸೆ (ಕೃತಿ: ನೀರಕಂಡಲ್ಲಿ ಮುಳುಗುವರಯ್ಯ)
-
ಗೊರುಚ ಜನಪದ ಸಾಹಿತ್ಯ ಗ್ರಂಥ ಪ್ರಶಸ್ತಿ: ಗಾಯಕಿ ಹಾಗೂ ಲೇಖಕಿ ಡಾ. ಎಂ. ಕೆಂಪಮ್ಮ ಕಾರ್ಕಹಳ್ಳಿ (ಕೃತಿ: ಮಂಡ್ಯ ಜಿಲ್ಲೆಯ ಆಚರಣಾತ್ಮಕ ಜಾನಪದ)
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ, ದಾವಣಗೆರೆ ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ, ದಾವಣಗೆರೆ ಶಸಾಪ ಜಿಲ್ಲಾಧ್ಯಕ್ಷ ಹೆಚ್.ಕೆ. ಲಿಂಗರಾಜು, ಡಾ. ಪಾಲಾಕ್ಷಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಹಿರಿಯ ಸಂಶೋಧಕ ಡಾ. ಬಿ. ರಾಜಶೇಖರಪ್ಪ, ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಆರ್. ಮಲ್ಲಿಕಾರ್ಜುನಯ್ಯ, ನಿವೃತ್ತ ಉಪನಿರ್ದೇಶಕ ಎನ್.ಎಂ. ರಮೇಶ್, ಡಾ. ಮೈಲನಹಳ್ಳಿ ರೇವಣ್ಣ, ಕರವೇ ಜಿಲ್ಲಾಧ್ಯಕ್ಷ ಕೆ.ಆರ್. ಮಂಜುನಾಥ್, ಶಸಾಪ ರಾಜ್ಯ ಕಾರ್ಯದರ್ಶಿ ಸೋಮವಾರ ಗಾಂಜಿ ಹಾಗೂ ಕದಳಿ ವೇದಿಕೆಯ ಜಿಲ್ಲಾಧ್ಯಕ್ಷೆ ಜಯಲಕ್ಷ್ಮೀ ಉಪಸ್ಥಿತರಿದ್ದರು.
ಉಮೇಶ್ ಪತ್ತಾರ್ ವಚನ ಪ್ರಾರ್ಥನೆ ನೆರವೇರಿಸಿದರು. ಶಸಾಪ ರಾಜ್ಯ ಉಪಾಧ್ಯಕ್ಷ ಕೆ.ಎಂ. ವೀರೇಶ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಹುರಳಿ ಎಂ. ಬಸವರಾಜ್ ಕಾರ್ಯಕ್ರಮ ನಿರೂಪಿಸಿ, ಕೆ.ಪಿ.ಎಂ. ಗಣೇಶಯ್ಯ ವಂದನಾರ್ಪಣೆ ಮಾಡಿದರು.
Leave a comment