ಚಿತ್ರದುರ್ಗ (Chitradurga Live): ಮದುವೆಯಾದ ದಿನವೇ ನವವಿವಾಹಿತೆ ನಿಗೂಢವಾಗಿ ನಾಪತ್ತೆಯಾಗಿ, ಮೂರು ದಿನಗಳ ಬಳಿಕ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಪ್ರಕರಣಕ್ಕೆ ಇದೀಗ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಗೆಳೆಯನಿಗೆ ಮುಂದೆ ನಿಂತು ಮದುವೆ ಮಾಡಿಸಿದ್ದ ಸ್ನೇಹಿತರೇ ಆತನ ಪತ್ನಿಯ ಮೇಲೆ ಕಾಮದ ಕಣ್ಣು ಹಾಕಿ, ಅತ್ಯಾಚಾರವೆಸಗಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಪೈಶಾಚಿಕ ಕೃತ್ಯಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಠಾಣೆ ಪೊಲೀಸರು ಬಿರುಸಿನ ಕಾರ್ಯಾಚರಣೆ ನಡೆಸಿ, ಬೋರಯ್ಯ ಹಾಗೂ ಕಾರಯ್ಯ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.
ಮುಂದೆ ನಿಂತು ಮದುವೆ ಮಾಡಿಸಿದ್ದರು!
ಕಳೆದ ಶುಕ್ರವಾರ ಆರೋಪಿಗಳಾದ ಬೋರಯ್ಯ ಮತ್ತು ಕಾರಯ್ಯ ತಮ್ಮ ಆಪ್ತ ಸ್ನೇಹಿತ ಗಜೇಂದ್ರನ ಪ್ರೇಮ ವಿವಾಹವನ್ನು ತಾವೇ ಮುಂದೆ ನಿಂತು ಅದ್ದೂರಿಯಾಗಿ ನೆರವೇರಿಸಿದ್ದರು. ಆದರೆ ಸ್ನೇಹಿತನ ಸಂಸಾರ ಚೆನ್ನಾಗಿರಲಿ ಎಂದು ಹರಸಬೇಕಾದವರ ಮನಸ್ಸಿನಲ್ಲಿ ವಿಕೃತಿ ಮನೆಮಾಡಿತ್ತು. ಬೆಳಗ್ಗೆ ಮದುವೆ ಮುಗಿದು ಸಂಜೆಯಾಗುತ್ತಿದ್ದಂತೆ ಸ್ನೇಹಿತನ ಹೆಂಡತಿಯ ಮೇಲೆಯೇ ಇಬ್ಬರೂ ಕಣ್ಣಿಟ್ಟಿದ್ದರು.
ಅತ್ಯಾಚಾರವೆಸಗಿ ಬಾವಿಗೆ ಎಸೆದಿದ್ದರು
ಮದುವೆಯಾದ ಮೊದಲ ದಿನದ ರಾತ್ರಿಯೇ ನವವಿವಾಹಿತೆಯನ್ನು ಉಪಾಯವಾಗಿ ಎನ್.ಮಹದೇವಪುರ ಗ್ರಾಮದ ಬಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಆರೋಪಿಗಳು, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ವಿಷಯ ಎಲ್ಲಿ ಹೊರಬರುತ್ತದೋ ಎಂಬ ಭಯದಿಂದ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
ಕೃತ್ಯದ ಸುಳಿವು ಸಿಗಬಾರದು ಎಂಬ ಕಾರಣಕ್ಕೆ ಶವವನ್ನು ಸಮೀಪದ ಕೃಷಿ ಬಾವಿಗೆ ಎಸೆದು ಏನೂ ತಿಳಿಯದವರಂತೆ ನಾಟಕವಾಡಿದ್ದರು.
ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಸತ್ಯ
ಮದುವೆಯಾದ ದಿನವೇ ವಧು ನಾಪತ್ತೆಯಾಗಿದ್ದರಿಂದ ಕುಟುಂಬಸ್ಥರು ಕಂಗಾಲಾಗಿದ್ದರು. ಮೂರು ದಿನಗಳ ಬಳಿಕ ಬಾವಿಯಲ್ಲಿ ಆಕೆಯ ಶವ ಪತ್ತೆಯಾದಾಗ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದವು. ತಕ್ಷಣ ಕಾರ್ಯಪ್ರವೃತ್ತರಾದ ನಾಯಕನಹಟ್ಟಿ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದರು.
ಸಂಶಯದ ಮೇರೆಗೆ ಗಂಡನ ಆಪ್ತ ಸ್ನೇಹಿತರಾದ ಬೋರಯ್ಯ ಮತ್ತು ಕಾರಯ್ಯನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ಘಟನೆಯ ಅಸಲಿಯತ್ತು ಬಯಲಾಗಿದೆ. ಆರೋಪಿಗಳು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದು, ಪೊಲೀಸರು ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆಯಿಂದ ನಾಯಕನಹಟ್ಟಿ ಸುತ್ತಮುತ್ತಲ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
Leave a comment