ಚಳ್ಳಕೆರೆ (Chitradurga Live): ಎಟಿಎಂ ಕೇಂದ್ರಗಳಿಗೆ ಹಣ ಡ್ರಾ ಮಾಡಲು ಬರುವ ಮುಗ್ಧ ಗ್ರಾಹಕರೇ ಇವರ ಟಾರ್ಗೆಟ್. ಸಹಾಯ ಮಾಡುವ ನೆಪದಲ್ಲಿ ಒಳನುಗ್ಗಿ, ಕ್ಷಣಾರ್ಧದಲ್ಲಿ ಎಟಿಎಂ ಕಾರ್ಡ್ ಬದಲಾಯಿಸಿ ಖಾತೆಯಲ್ಲಿದ್ದ ಹಣವನ್ನು ಲಪಟಾಯಿಸುತ್ತಿದ್ದ ಇಬ್ಬರು ಖದೀಮರು ಇದೀಗ ಖಾಕಿ ಬೀಸಿದ ಬಲೆಗೆ ಬಿದ್ದಿದ್ದಾರೆ.
ಚಳ್ಳಕೆರೆ ಉಪವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಇಬ್ಬರು ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಟ್ಟು ₹60,000 ನಗದು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆಯ ಪ್ರಮುಖ ಅಂಶಗಳು:
ಬಂಧಿತ ಆರೋಪಿಗಳು: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಡೆಂಕಣಕೋಟೆ ತಾಲೂಕಿನ ಆದಿದೊಡ್ಡಿ ಗ್ರಾಮದ ಸುರೇಶ್ ನಾಗರಾಜು ಹಾಗೂ ಹೊಸದುರ್ಗ ತಾಲೂಕಿನ ಹೊಸಕೆರೆ ಗ್ರಾಮದ ಶಿವಕುಮಾರ್.
ಎಟಿಎಂ ಕೇಂದ್ರಗಳಲ್ಲಿ ಹಣ ತೆಗೆಯಲು ಪರದಾಡುವವರ (ಮುಖ್ಯವಾಗಿ ಮಹಿಳೆಯರು ಮತ್ತು ವಯಸ್ಸಾದವರ) ಗಮನವನ್ನು ಬೇರೆಡೆ ಸೆಳೆದು, ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಅಸಲಿ ಕಾರ್ಡ್ನಂತೆಯೇ ಇರುವ ನಕಲಿ ಕಾರ್ಡ್ ನೀಡಿ, ಪಿನ್ ನಂಬರ್ ಕದ್ದು ಹಣ ದೋಚುತ್ತಿದ್ದರು.
ನಾಯಕನಹಟ್ಟಿಯಲ್ಲಿ ಮಹಿಳೆಗೆ ವಂಚನೆ
ಇತ್ತೀಚೆಗೆ ನಾಯಕನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಎಟಿಎಂ ಕೇಂದ್ರವೊಂದಕ್ಕೆ ಮಹಿಳೆಯೊಬ್ಬರು ಹಣ ಡ್ರಾ ಮಾಡಲು ಬಂದಿದ್ದರು. ಈ ವೇಳೆ ಅಲ್ಲಿಗಾಗಮಿಸಿದ ವಂಚಕರು, ಆಕೆಯ ಗಮನವನ್ನು ಬೇರೆಡೆಗೆ ಸೆಳೆದು ಎಟಿಎಂ ಕಾರ್ಡ್ ಬದಲಾಯಿಸಿದ್ದರು. ಬಳಿಕ ಮಹಿಳೆಯ ಖಾತೆಯಲ್ಲಿದ್ದ ಸುಮಾರು ₹50 ಸಾವಿರ ಹಣವನ್ನು ದೋಚಿದ್ದರು.
ಈ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಆರೋಪಿಗಳ ಜಾಲದ ಬಗ್ಗೆ ಸುಳಿವು ಸಿಕ್ಕಿತ್ತು. ಆರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದಾಗ, ಚಿತ್ರದುರ್ಗ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಇದೇ ರೀತಿ ₹40 ಸಾವಿರ ಹಣ ಲಪಟಾಯಿಸಿರುವ ವಿಚಾರ ಬಾಯ್ಬಿಟ್ಟಿದ್ದಾರೆ. ಒಟ್ಟು ₹90 ಸಾವಿರ ಕಳ್ಳತನವಾಗಿದ್ದು, ಸದ್ಯ ಪೊಲೀಸರು ₹60 ಸಾವಿರ ನಗದನ್ನು ರಿಕವರಿ ಮಾಡಿದ್ದಾರೆ.
ಪೊಲೀಸರ ಕಾರ್ಯಕ್ಕೆ ಎಸ್ಪಿ ಮೆಚ್ಚುಗೆ
ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ರಂಜಿತ್ ಕುಮಾರ್ ಬಂಡಾರು ಹಾಗೂ ಹೆಚ್ಚುವರಿ ಎಸ್ಪಿ ಡಾ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ವೃತ್ತ ನಿರೀಕ್ಷಕ ಹನುಮಂತಪ್ಪ ಸಿರೇಹಳ್ಳಿ, ಪಿಎಸ್ಐ ಪಾಂಡುರಂಗ, ಸಿಬ್ಬಂದಿಗಳಾದ ಎಂ. ಭಾಷ, ಶ್ರೀಹರಿ, ಖಾದರ್ ಭಾಷ ಹಾಗೂ ತಿಮ್ಮೇಶ್ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ. ತ್ವರಿತಗತಿಯಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸ್ ತಂಡದ ಕಾರ್ಯಕ್ಕೆ ಎಸ್ಪಿ ರಂಜಿತ್ ಕುಮಾರ್ ಬಂಡಾರು ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರಿಗೆ ಡಿವೈಎಸ್ಪಿ ಎಚ್ಚರಿಕೆ:
“ಎಟಿಎಂ ಕೇಂದ್ರಗಳಲ್ಲಿ ಅಪರಿಚಿತರ ಸಹಾಯ ಪಡೆಯಬೇಡಿ. ನೀವು ಹಣ ಡ್ರಾ ಮಾಡುವಾಗ ಬೇರೆಯವರು ಒಳಗಿದ್ದರೆ ಎಚ್ಚರ ವಹಿಸಿ. ನಿಮ್ಮ ಪಿನ್ ನಂಬರ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಎಟಿಎಂ ಕಾರ್ಡ್ ಬದಲಾಯಿಸಿ ವಂಚಿಸುವ ಜಾಲ ಸಕ್ರಿಯವಾಗಿದ್ದು, ಸಾರ್ವಜನಿಕರು ಅತ್ಯಂತ ಜಾಗರೂಕತೆಯಿಂದ ಇರಬೇಕು” ಎಂದು ಚಳ್ಳಕೆರೆ ಡಿವೈಎಸ್ಪಿ ಎಂ.ಜಿ. ಸತ್ಯನಾರಾಯಣ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
Leave a comment