ಚಿತ್ರದುರ್ಗ / ಶಿವಮೊಗ್ಗ: ಚಿತ್ರದುರ್ಗ ಮೂಲದ ಮಹಿಳೆಯೊಬ್ಬರು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ಮೂವರು ಮಕ್ಕಳೊಂದಿಗೆ ಶಿವಮೊಗ್ಗದ ರೈಲ್ವೆ ಸೇತುವೆ ಮೇಲಿಂದ ತುಂಗಾ ನದಿಗೆ ಹಾರಿದ ದಾರುಣ ಘಟನೆ ಸಂಭವಿಸಿದೆ. ಸ್ಥಳೀಯ ಯುವಕನೊಬ್ಬನ ಸಮಯಪ್ರಜ್ಞೆಯಿಂದ ತಾಯಿ ಮತ್ತು 11 ತಿಂಗಳ ಗಂಡು ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ನದಿಗೆ ಬಿದ್ದ ಇಬ್ಬರು ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆ.
ಮೂಲತಃ ಚಿತ್ರದುರ್ಗದವರಾದ ಭವಾನಿ ಎಂಬುವವರೇ ಮಕ್ಕಳೊಂದಿಗೆ ನದಿಗೆ ಹಾರಿದ ಮಹಿಳೆ. ಭವಾನಿ ಅವರ ಪತಿ ದುಗ್ಗಪ್ಪ ಜೆಸಿಬಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದು, ಕುಟುಂಬವು ಶಿವಮೊಗ್ಗ ತಾಲೂಕಿನ ಸವಳಂಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿತ್ತು.
ಜೀವದ ಹಂಗು ತೊರೆದು ರಕ್ಷಿಸಿದ ಸ್ಥಳೀಯ ಯುವಕ
ಭವಾನಿ ಅವರು ತಮ್ಮ ಮಕ್ಕಳಾದ ಸಾನ್ವಿಕಾ (6), ತನ್ವಿಕಾ (4) ಮತ್ತು 11 ತಿಂಗಳ ಗಂಡು ಮಗುವಿನೊಂದಿಗೆ ರೈಲ್ವೆ ಹಳಿ ಮೇಲೆ ನಡೆದುಕೊಂಡು ಹೋಗುತ್ತಿರುವುದನ್ನು ಸ್ಥಳೀಯ ನಿವಾಸಿ ನವೀನ್ ಎಂಬುವವರು ಗಮನಿಸಿದ್ದರು. ಅಪಾಯ ಅರಿತು ಹಳಿಯ ಮೇಲೆ ಹೋಗದಂತೆ ಅವರು ಎಚ್ಚರಿಸುವಷ್ಟರಲ್ಲೇ, ಭವಾನಿ ಇಬ್ಬರು ಹೆಣ್ಣುಮಕ್ಕಳನ್ನು ನದಿಗೆ ತಳ್ಳಿ, ಕಂಕುಳಲ್ಲಿ ಹಸುಗೂಸನ್ನು ಹಿಡಿದುಕೊಂಡು ತಾವೂ ನೀರಿಗೆ ಹಾರಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ನವೀನ್, ನದಿಗೆ ಧುಮುಕಿ ಈಜಿ ಭವಾನಿ ಹಾಗೂ ಅವರ 11 ತಿಂಗಳ ಗಂಡು ಮಗುವನ್ನು ಸುರಕ್ಷಿತವಾಗಿ ದಡಕ್ಕೆ ತಂದು ರಕ್ಷಿಸಿದ್ದಾರೆ.
“ಮೊದಲು ಇಬ್ಬರು ಹೆಣ್ಣು ಮಕ್ಕಳನ್ನು ನದಿಗೆ ಎಸೆದರು, ನಂತರ ಮತ್ತೊಂದು ಹಸುಗೂಸನ್ನು ಹಿಡಿದುಕೊಂಡು ತಾವೂ ಹಾರಿದರು. ರಕ್ಷಣೆ ಮಾಡುವ ವೇಳೆಯಲ್ಲೂ ಆ ಮಗು ತಾಯಿಯ ಕಂಕುಳಲ್ಲೇ ಇತ್ತು.”
– ನವೀನ್, ರಕ್ಷಣೆ ಮಾಡಿದ ಯುವಕ
ನದಿಯಲ್ಲಿ ಹೆಚ್ಚಿದ ನೀರಿನ ಹರಿವು: ಶೋಧ ಕಾರ್ಯಾಚರಣೆಗೆ ಅಡ್ಡಿ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಶಿವಮೊಗ್ಗ ಕೋಟೆ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ನಾಪತ್ತೆಯಾದ ಮಕ್ಕಳಿಗಾಗಿ ಬೋಟ್ ಮೂಲಕ ತೀವ್ರ ಶೋಧ ನಡೆಸಿದರು. ಆದರೆ, ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತುಂಗಾ ನದಿಯಲ್ಲಿ ನೀರಿನ ಹರಿವು ಮತ್ತು ರಭಸ ಹೆಚ್ಚಾಗಿದೆ. ಇದರೊಂದಿಗೆ ಕತ್ತಲು ಆವರಿಸಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿಯಾಗಿದ್ದು, ತಾತ್ಕಾಲಿಕವಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಮೆಗ್ಗಾನ್ ಆಸ್ಪತ್ರೆಗೆ ದಾಖಲು
ನೀರಿನಿಂದ ರಕ್ಷಿಸಲಾದ ತಾಯಿ ಭವಾನಿ ಮತ್ತು 11 ತಿಂಗಳ ಗಂಡು ಮಗುವನ್ನು ತಕ್ಷಣವೇ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಬ್ಬರೂ ಚೇತರಿಸಿಕೊಳ್ಳುತ್ತಿದ್ದಾರೆ. ಕೌಟುಂಬಿಕ ಕಲಹವೇ ಈ ದುಡುಕಿನ ನಿರ್ಧಾರಕ್ಕೆ ಕಾರಣವಿರಬಹುದು ಎಂದು ಸ್ಥಳದಲ್ಲಿದ್ದ ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Leave a comment